ಹಿಗ್ಗುವಿ ಯಾಕೋ ಈ ದೇಹಕ್ಕೆ (ಶ್ರೀಪುರಂದರದಾಸರು)

ರಾಗ – ಭೈರವಿ             ತಾಳ – ಆಟ

ಹಿಗ್ಗುವಿ ಯಾಕೋ ಈ ದೇಹಕ್ಕೆ ಹಿಗ್ಗುವಿ ಯಾಕೊ || ಪ ||
ಹಿಗ್ಗುವ ತಗ್ಗುವ ಮುಗ್ಗುವ ನೆಗ್ಗುವ
ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ || ಅ.ಪ ||

ಸತಿ ಪುರುಷರು ಕೂಡಿ ರತಿ ಕ್ರೀಡೆಗಳನಾಡಿ
ಪತನವಾದಿಂದ್ರಿಯ ಪ್ರತಿಮೆಯ ದೇಹಕ್ಕೆ || ೧ ||

ಆಗ-ಭೋಗಗಳನ್ನು ಆಗುಮಾಡುತಲಿಪ್ಪ
ರೋಗಬಂದರೆ ಬಿದ್ದು ಹೋಗುವ ದೇಹಕ್ಕೆ || ೨ ||

ಪರರ ಸೇವೆಯ ಮಾಡಿ ನರಕಭಾಜನನಾಗಿ
ಮರಳಿಮರಳಿ ಬಿದ್ದು ಹೋಗುವ ದೇಹಕ್ಕೆ || ೩ ||

ಸೋರುವದೊಂಬತ್ತು ಬಾಗಿಲದಿಂದಲಿ ಮಲ
ನೀರಿಲ್ಲದಿದ್ದರೆ ನಾರುವ ದೇಹಕ್ಕೆ || ೪ ||

ಪುರಂದರ ವಿಟ್ಠಲನ ಚರಣಕಮಲಕ್ಕೆ
ಎರಗದೆ ಇರುತಿಹ ಗರುವದ ದೇಹಕ್ಕೆ || ೫ ||

Continue reading

ಮನಶುದ್ಧಿ ಇಲ್ಲದವಗೆ (ಶ್ರೀಪುರಂದರದಾಸರು)

ಮನಶುದ್ಧಿ ಇಲ್ಲದವಗೆ ಮಂತ್ರದ ಫಲವೇನು
ತನುಶುದ್ಧಿ ಇಲ್ಲದವಗೆ ತೀರ್ಥದ ಫಲವೇನು
ಮಿಂದಲ್ಲಿ ಫಲವೇನು ಮೀನುಮೋಸಳೆಗಳಂತೆ
ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ
ಹೊರಗೆ ಮಿಂದು ಒಳಗೆ ಮೀಯದವರ ಕಂಡು
ಬೆರಗಾಗಿ ನಗುತಿದ್ದ ಪುರಂದರವಿಠ್ಠಲ ||

ಹಣವೇ ನಿನ್ನಯ ಗುಣವೆನಿತು (ಶ್ರೀವಾದಿರಾಜಯತಿ)

ಹಣವೇ ನಿನ್ನಯ ಗುಣವೆನಿತು ವರ್ಣಿಸಲಿ
ಹಣವಿಲ್ಲದವನೊಬ್ಬ ಹೆಣಕಿಂತ ಕಡೆಯಯ್ಯ || ಪ ||

ಬೆಲೆಯಾಗದನೆಲ್ಲ ಬೆಲೆಯ ಮಾಡಿಸುವಿ
ಎಲ್ಲಾ ವಸ್ತುಗಳನಿದ್ದಲ್ಲೇ ತರಿಸುವಿ |
ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ
ಹೊಲೆಯನಾದರು ತಂದು ಒಳಗೆ ಸೇರಿಸುವಿ || ೧ ||

ಅಂಗನೆಯರ ಸಂಗವನು ಮಾಡಿಸುವಿ
ಶೃಂಗಾರಾಭರಣಂಗಳ ತರಿಸುವಿ |
ಮಂಗನಾದರು ಅನಂಗನೆಂದೆನಿಸುವಿ
ಕಂಗಳಿಲ್ಲದವಂಗೆ ಮಗಳ ಕೊಡಿಸುವಿ || ೨ ||

ಹರಣಕ್ಕೆ ಬಂದಂಥ ದುರಿತವ ಬಿಡಿಸುವಿ
ಸರುವರಿಗೆ ಶ್ರೇಷ್ಠ ನರನೆನಿಸುವಿ |
ಅರಿಯದ ಶುಂಠನ್ನ ಅರಿತವನೆನಿಸುವಿ
ಸಿರಿ ಹಯವದನನ ಸ್ಮರಣೆ ಮರೆಸುವಿ || ೩ ||

ಒಂದು ಬಾರಿ ಸ್ಮರಣೆ ಸಾಲದೆ (ಶ್ರೀವಾದಿರಾಜರು)

ರಾಗ – ಪಂತುವರಾಳಿ   ತಾಳ – ರೂಪಕ

ಒಂದು ಬಾರಿ ಸ್ಮರಣೆ ಸಾಲದೆ ಆ- || ಪ ||
ನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ || ಅ.ಪ ||

ಹಿಂದನೇಕ ಜನ್ಮಗಳಲ್ಲಿ ನೊಂದು ಯೋನಿಗಳಲಿ ಬಂದು
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ || ೧ ||

ಪ್ರತೃತಿಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ || ೨ ||

ಆರುಮಂದಿ ವೈರಿಗಳನು ಸೇರಿಸಲೀಸದಂತೆ ಜರಿದು
ಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ || ೩ ||

ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆ
ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ || ೪ ||

ಹೀನಬುದ್ಧಿಯಿಂದ ಶ್ರೀಹಯವದನನ್ನ ಜರಿದು
ತಾನು ಬದುಕಲರಿಯದಿರಲು ತೋರಿ ಕೊಟ್ಟ ಮಧ್ವಮುನಿಯು || ೫ ||

ರಾಘವೇಂದ್ರಗುರುರಾಯರ ಸೇವಿಸಿರೋ (ಶ್ರೀದವಿಠ್ಠಲದಾಸರು)

ರಾಗ – ಯದುಕುಲ ಕಾಂಬೋಧಿ   ತಾಳ – ಆದಿ

ರಾಘವೇಂದ್ರಗುರುರಾಯರ ಸೇವಿಸಿರೋ ಸೌಖ್ಯದಿ ಜೀವಿಸಿರೋ || ಪ ||
ತುಂಗಾತೀರದಿ ರಘುರಾಮನ ಪೂಜಿಪರೋ ನರಸಿಂಗನ ಭಜಕರೋ || ಅ.ಪ ||

ಶ್ರೀಸುಧೀಂದ್ರ ಕರಸರೋಜಸಂಜಾತ ಧರೆಯೊಳಗೆ ಪ್ರಖ್ಯಾತ
ದಾಶರಥಿಯ ದಾಸತ್ವವ ತಾವಹಿಸಿ ದುರ್ಮತಗಳ ಜಯಿಸಿ
ಈಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ
ಭೂಸುರರಿಗೆ ಸಂಸೇವ್ಯ ಸದಾಚರಣಿ ಕಂಗೊಳಿಸುವ ಕರುಣಿ || ೧ ||

ಕುಂದದೆವರಮಂತ್ರಾಲಯದಲ್ಲಿರುವ ಕರೆದಲ್ಲಿಗೆ ಬರುವ
ಸಂದರುಶನಮಾತ್ರದಲಿ ಮಹತ್ಪಾಪ ಪರಿದೋಡಿಸಲಾಪ
ವೃಂದಾವನಗತಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ
ಮಂದಭಾಗ್ಯರಿಗೆ ದೊರೆಯದಿವರ ಸೇವಾ ಶರಣರಸಂಜೀವ || ೨ ||

ಶ್ರೀದವಿಠ್ಠಲನ ಸನ್ನಿಧಾನಪಾತ್ರ ಸಂಸ್ಥುಸಿದ ಮಾತ್ರ
ಮೋದ ಪಡಿಸುತಿಹ ತಾನಿಹಪರದಲ್ಲಿ ಈತಗೆ ಸರಿಯೆಲ್ಲಿ
ಮೇದಿನಿಯೊಳಗಿನ್ನರಸಲು ನಾಕಾಣೆ ಪುಸಿಯಲ್ಲೆನ್ನಾಣೆ
ಪಾದಸ್ಮರಣೆಮಾಡದವನೆ ಪಾಪಿ ನಾ ಪೇಳುವೆ ಸ್ಥಾಪಿ || ೩ ||

ಬಾರೋ ಮನಗೆ ಗೋವಿಂದ (ಶ್ರೀಪಾದರಾಜರು)

ರಾಗ – ಮಧ್ಯಮಾವತಿ   ತಾಳ – ಆಟ

ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ
ತೋರೋ ಎನಗೆ ಮುಕುಂದ ನಲಿದಾಡು ಮನದಲಿ
ಮಾರಪಿತನೆ ಆನಂದ ನಂದನ್ನ ಕಂದ || ಪ ||

ಚಾರುತರ ಶರೀರ ಕರುಣಾ
ವಾರಿನಿಧಿ ಭವಘೋರನಾಶನ
ವಾರಿಜಾಸನವಂದ್ಯ ನೀರಜ
ಸಾರಸದ್ಗುಣ ಹೇ ರಮಾಪತಿ || ಅ.ಪ ||

ನೋಡು ದಯದಿಂದೆನ್ನ ಕರಪದುಮ ಶಿರದಲಿ
ನೀಡು ಭಕ್ತಪ್ರಸನ್ನ ನಲಿದಾಡು ಮನದಲಿ
ಬೇಡಿಕೊಂಬೆನೊ ನಿನ್ನ ಆನಂದಘನ್ನ
ಮಾಡದಿರು ಅನುಮಾನವನು ಕೊಂ-
ಡಾಡುವೆನು ತವ ಮಹಿಮೆಗಳನು
ಜೋಡಿಸುವೆನು ಕರಗಳನು ಚರಣಕೆ
ಕೂಡಿಸೋ ತವ ದಾಸಜನರೊಳು || ೧ ||
ಬರೋಮನೆಗೆ . . .

ಹೇಸಿ ವಿಷಯಗಳಲ್ಲೀ ತೊಳಲಾಡಿ ನಾ ಬಲು
ಕ್ಲೇಶ ಪಡುವುದ ಬಲ್ಲೀ ಧನಯುವತಿಗಳ ಸುಖ
ಲೇಸು ಎಂಬುದನು ಕೊಲ್ಲಿ ಆಸೆ ಬಿಡಿಸಿಲ್ಲಿ
ಏಸುಜನುಮದ ದೋಷದಿಂದಲಿ
ಈಸುವೆನು ಇದರೊಳಗೆ ಇಂದಿಗೆ
ಮೋಸವಾಯಿತು ಆದುದಾಗಲಿ
ಶ್ರೀಶ ನೀ ಕೈ ಪಿಡಿದು ರಕ್ಷಿಸೋ || ೨ ||
ಬರೋಮನೆಗೆ . . .

ನೀನೆ ಗತಿ ಎನಗಿಂದು ಉದ್ಧರಿಸೊ ಬೇಗನೆ
ದೀನಜನರಿಗೆ ಬಂಧು ನಾ ನಿನ್ನ ಸೇವಕ
ಶ್ರೀನಿವಾಸನೆ ಎಂದೆಂದು ಕಾರುಣ್ಯಸಿಂಧೂ
ಪ್ರಾಣಪತಿ ಹೃದಯಾಬ್ಜಮಂಟಪ
ಸ್ಥಾನದೊಳಗಭಿವ್ಯಾಪ್ತ ಚಿನ್ಮಯ
ಧ್ಯಾನಗೋಚರನಾಗಿ ಕಣ್ಣಿಗೆ
ಕಾಣಿಸುತ ಶ್ರೀರಂಗವಿಠ್ಠಲ || ೩ ||
ಬರೋಮನೆಗೆ . . .

ಶ್ರೀವಿಘ್ನೇಶ್ವರಸ್ತೋತ್ರ ಸಂಧಿ – ಶ್ರೀಹರಿಕಥಾಮೃತಸಾರ – ೨೮ನೇ ಸಂಧಿ (ಶ್ರೀಜಗನ್ನಾಥದಾಸರು)

ಹರಿಕಥಾಮೃತಸಾರ ಗುರುಗಳ |
ಕರುಣದಿಂದಾಪನಿತು ಪೇಳುವೆ |
ಪರಮಭಗವದ್ಭಕ್ತರಿದನಾದರದಿ ಕೇಳುವುದು || ಪ ||

ಶ್ರೀಶನಂಘ್ರಿಸರೋಜಭೃಂಗ ಮ-
ಹೇಶಸಂಭವ ಮನ್ಮನದೊಳು ಪ್ರ-
ಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ |
ನೀ ಸಲಹು ಸಜ್ಜನರ ವೇದ-
ವ್ಯಾಸಕರುಣಾಪಾತ್ರ ಮಹದಾ-
ಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು || ೧ ||

ಏಕದಂತ ಇಭೇಂದ್ರಮುಖ ಚಾ-
ಮೀರಕೃತಸುಭೂಷಣಾಂಗ ಕೃ-
ಪಾಕಟಾಕ್ಷದಿ ನೋಡು ವಿಜ್ಞಾಪಿಸುವೆ ಇನಿತೆಂದು |
ನೋಕನೀಯನ ತುತಿಸುತಿಪ್ಪ ವಿ-
ವೇಕಿಗಳ ಸಹವಾಸಸುಖಗಳ
ನೀ ಕರುಣಿಸುವದೆಮಗೆ ಸಂತತ ಪರಮಕರುಣದಲಿ || ೨ ||

ವಿಘ್ನರಾಜನೆ ದಿರ್ವಿಷಯದೊಳು
ಮಗ್ನವಾಗಿಹ ಮನವ ಮಹದೋ-
ಷಘ್ನನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ |
ಲಗ್ನವಾಗಲಿ ನಿತ್ಯ ನರಕ ಭ-
ಯಾಗ್ನಿಗಳಿಗಾನಂಜೆ ಗುರುವರ
ಭಗ್ನಗೈಸೆನ್ನವಗುಣಗಳನು ಪ್ರತಿದಿವಸದಲ್ಲಿ || ೩ ||

ಧನಪ ವಿಷ್ವಕ್ಸೇನ ವೈದ್ಯಾ-
ಶ್ವಿನಿಗಳಿಗೆ ಸರಿಯೆನಿಪ ಷಣ್ಮುಖ-
ನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ- |
ವಿನುತ ವಿಶ್ವೋಪಾಸಕನೆ ಸ-
ನ್ಮನದಿ ವಿಜ್ಞಾಪಿಸುವೆ ಲಕ್ಷ್ಮೀ
ವನಿತೆಯರಸನ ಭಕ್ತಿಜ್ಞಾನವ ಕೊಟ್ಟು ಸಲಹುವದು || ೪ ||

ಚಾರುದೇಷ್ಣಾಹ್ವಯನೆನಿಸಿ ಅವ-
ತಾರ ಮಾಡಿದೆ ರುಗ್ಮಿಣೀಯಲಿ
ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ |
ಶೌರಿಯಾಜ್ಞದಿ ಸಂಹರಿಸಿ ಭೂ-
ಭಾರವಿಳುಹಿದ ಕರುಣಿ ತ್ವತ್ಪಾ-
ದಾರವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ || ೫ ||

Continue reading